ಕುಮಟಾ: ತಾಲೂಕಿನ ಕೊಂಕಣ ಎಜುಕೇಶನ್ ಟ್ರಸ್ಟ್ನ ಸಿ.ವಿ.ಎಸ್.ಕೆ ಪ್ರೌಢಶಾಲೆಯ ಎಸ್.ಎಸ್.ಎಲ್.ಸಿ ವಿದ್ಯಾರ್ಥಿನಿ ಸಂಜನಾ ಜೈರಾಮ ಭಟ್ಟ ಈಕೆ ಮರುಮೌಲ್ಯಮಾಪನದಲ್ಲಿ ಪೂರ್ಣಾಂಕ ಪಡೆಯುವ ಮೂಲಕ ಕರ್ನಾಟಕ ರಾಜ್ಯದಲ್ಲಿ ಪ್ರಥಮ ಸ್ಥಾನವನ್ನು ತನ್ನದಾಗಿಸಿಕೊಂಡಿದ್ದಾಳೆ. ಎಸ್.ಎಸ್.ಎಲ್.ಸಿ ಫಲಿತಾಂಶ ಘೋಷಣೆ ಸಂದರ್ಭದಲ್ಲಿ ಈಕೆಗೆ 622 ಅಂಕ ಲಭಿಸಿತ್ತು, ಹೀಗಾಗಿ ಈಕೆ ರಾಜ್ಯಮಟ್ಟದಲ್ಲಿ 4ನೇ ಸ್ಥಾನಕ್ಕೆ ತೃಪ್ತಿ ಪಡೆಯುವಂತಾಗಿತ್ತು. ಆದರೆ ಈಕೆ ಫಲಿತಾಂಶ ಬಂದ ಸಂದರ್ಭದಲ್ಲಿಯೂ 625 ಕ್ಕೆ 625 ಅಂಕಗಳನ್ನು ಪಡೆಯುವ ಭರವಸೆ ವ್ಯಕ್ತಪಡಿಸಿ ಮರುಮೌಲ್ಯಮಾಪನಕ್ಕಾಗಿ ಅರ್ಜಿಯನ್ನು ಸಲ್ಲಿಸಿದ್ದಳು. ಇದೀಗ ಮರುಮೌಲ್ಯಮಾಪನದ ಫಲಿತಾಂಶ ಪ್ರಕಟಗೊಂಡಿದ್ದು ಈಕೆ ರಾಜ್ಯದ ಟಾಪರ್ ಆಗಿ ಗುರುತಿಸಿಕೊಂಡಿದ್ದಾಳೆ.
ನಿರಂತರ ಪರಿಶ್ರಮ ಹಾಗೂ ಶಾಲಾ ಮಟ್ಟದಲ್ಲಿ ನಡೆಸಿದ ಎಲ್ಲಾ ಪರೀಕ್ಷೆಗಳಲ್ಲಿಯೂ ಈಕೆ ಪೂರ್ಣ ಅಂಕಗಳನ್ನೇ ಪಡೆದವಳಾಗಿದ್ದಳು. ಸಂಸ್ಥೆಯವರೂ ಈಕೆಯ ಮೇಲೆ ಭರವಸೆ ಇಟ್ಟಿದ್ದರು. ಇದೀಗ ಈಕೆಯ ನೈಜ ಫಲಿತಾಂಶ ಹೊರಬಂದಿದ್ದು, ಎಲ್ಲರೂ ಸಂತಸ ವ್ಯಕ್ತಪಡಿಸಿದ್ದಾರೆ.
ಈಗಾಗಲೇ ಸಂಸ್ಥೆಯ ಮೂವರು ವಿದ್ಯಾರ್ಥಿಗಳು ರಾಜ್ಯ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದು ಸಂಸ್ಥೆಗೆ ಕೀರ್ತಿ ತಂದಿದ್ದರು. ಇದೀಗ ಸಂಜನಾಳ ಸಾಧನೆಯಿಂದಾಗಿ ಕೊಂಕಣ ಎಜ್ಯುಕೇಶನ್ ಟ್ರಸ್ಟ್ನ ಸಿ.ವಿ.ಎಸ್.ಕೆ ಪ್ರೌಢಶಾಲೆಯಿಂದ ರಾಜ್ಯಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದವರ ಸಂಖ್ಯೆ ನಾಲ್ಕಕ್ಕೆ ಏರಿಕೆಯಾಗಿದೆ. ಅದಲ್ಲದೆ, ಉತ್ತರ ಕನ್ನಡ ಜಿಲ್ಲೆಯಿಂದ ಸಾಧನೆ ಮಾಡಿದ ವಿದ್ಯಾರ್ಥಿಗಳ ಪಟ್ಟಿಯಲ್ಲಿ ಸಂಜನಾ ಹೆಸರು ಸೇರ್ಪಡೆಯಾಗಿದ್ದು ಒಂದೇ ಸಂಸ್ಥೆಯ ನಾಲ್ವರು ವಿದ್ಯಾರ್ಥಿಗಳು ರಾಜ್ಯಮಟ್ಟದ ಪ್ರಥಮ ಸ್ಥಾನ ಪಡೆದಿರುವುದು ಸಾರ್ವಕಾಲಿಕ ದಾಖಲೆಯಾಗಿದೆ.
ಫಲಿತಾಂಶ ಘೋಷಣೆಯಾಗಿದ್ದ ಸಂದರ್ಭದಲ್ಲಿಯೇ 625 ಕ್ಕೆ 625 ಅಂಕಗಳನ್ನು ಪಡೆದ ವಿದ್ಯಾರ್ಥಿಗಳ ಸಾಲಿನಲ್ಲಿ ಸೇರಬೇಕಿದ್ದ ಎಲ್ಲಾ ಅರ್ಹತೆ ಹೊಂದಿದ್ದ ಸಂಜನಾಳಿಗೆ ಇದೀಗ ನ್ಯಾಯ ದೊರೆತಂತಾಗಿದೆ. ಈಕೆಯ ಸಾಧನೆಗೆ ಈಕೆಯ ಪಾಲಕರು ಹಾಗೂ ಸಿ.ವಿ.ಎಸ್.ಕೆ ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ಶ್ರೀಮತಿ ಸುಮಾ ಪ್ರಭು, ಕೊಂಕಣ ಎಜ್ಯುಕೇಶನ್ ಟ್ರಸ್ಟ್ನ ಕಾರ್ಯದರ್ಶಿ ಮುರಳೀಧರ ಪ್ರಭು, ಅಧ್ಯಕ್ಷರು, ವಿಶ್ವಸ್ಥರು ಹಾಗೂ ಶಾಲೆಯ ಹಿತೈಷಿಗಳು ಶುಭಾಶಯ ಕೋರಿದ್ದಾರೆ.