ಕುಮಟಾ: ಕೋವಿಡ್ ಮುಂಜಾಗ್ರತಾ ಕ್ರಮಗಳನ್ನು ಪಾಲಿಸುತ್ತ ಇಲ್ಲಿನ ಕೊಂಕಣ ಎಜ್ಯುಕೇಶನ್ ಟ್ರಸ್ಟ್ನ ಸಮೂಹ ಸಂಸ್ಥೆಗಳ ಆಶ್ರಯದಲ್ಲಿ 72ನೇ ಗಣರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು. ಸಂಸ್ಥೆಯ ಅಧ್ಯಕ್ಷರಾದ ಶ್ರೀ ವಿಠ್ಠಲ ಆರ್. ನಾಯಕ ಅವರು ಧ್ವಜಾರೋಹಣವನ್ನು ನೆರವೇರಿಸಿದರು.
ನಂತರ ಟ್ರಸ್ಟಿಗಳಾದ ರಮೇಶ ಪ್ರಭು ಮಾತನಾಡಿ, ದೇಶ ಕಾಪಾಡುವುದು ಗಡಿಯಲ್ಲಿದ್ದ ಸೈನಿಕರ ಕೆಲಸ ಮಾತ್ರವಲ್ಲದೆ ಈ ದೇಶದ ಪ್ರತಿಯೊಬ್ಬ ನಾಗರೀಕನ ಕರ್ತವ್ಯವೂ ಹೌದು. ಈ ದೇಶದ ಪ್ರತಿ ಪ್ರಜೆಯೂ ಸಂವಿಧಾನವನ್ನು ಅರ್ಥೈಸಿಕೊಂಡು ಅದರ ಪರಿಧಿಯಲ್ಲಿ ತಮ್ಮ ಹಕ್ಕು ಹಾಗೂ ಸ್ವಾತಂತ್ರ್ಯವನ್ನು ಪ್ರಾಮಾಣಿಕವಾಗಿ ಉಪಯೋಗಿಸಿಕೊಂಡು ಕರ್ತವ್ಯ ಮಾಡಿದರೆ ಮಾತ್ರ ದೇಶದ ರಕ್ಷಣೆ ಹಾಗೂ ಅಭಿವೃದ್ಧಿ ಸಾಧ್ಯ. ಭಾರತ ಇಂದು ಎಂತಹ ಆಪತ್ತು ಎದುರಾದರೂ ಅದನ್ನು ಸಮರ್ಥವಾಗಿ ಎದುರಿಸುವಂತಹ ಮನೋಬಲವನ್ನು ಹೊಂದಿದೆ. ಕೋವಿಡ್ ಮಹಾಮಾರಿಯ ಸಂದರ್ಭದಲ್ಲಿ ನಮ್ಮ ದೇಶವು ಪ್ರಪಂಚದ ಇತರೆ ದೇಶಗಳಿಗೆ ಹೋಲಿಸಿದಾಗ ಪರಿಸ್ಥಿತಿಯನ್ನು ಅತ್ಯಂತ ಸಮರ್ಥವಾಗಿ ನಿಭಾಯಿಸಿದೆ. ಇಲ್ಲಿನ ವಿಜ್ಞಾನಿಗಳು ಮತ್ತು ವೈದ್ಯರು ಕೋವಿಡ್ ಮಹಾಮಾರಿಗೆ ಲಸಿಕೆ ಕಂಡುಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಅವರ ಈ ಕಾರ್ಯವು ಶ್ಲಾಘನೀಯವೂ, ಸಮರ್ಥನೀಯವೂ ಆಗಿದೆ. ವಿಜ್ಞಾನಿಗಳ ಈ ಸಾಧನೆಗೆ ಕೊಂಕು ಹುಡುಕುವ ಬದಲು ಅವರ ಮನೋಬಲ ಹೆಚ್ಚಿಸುವ ಕೆಲಸ ಮಾಡಬೇಕು ಎಂದು ಕರೆನೀಡಿದರು. ಪ್ರತಿಯೊಬ್ಬರೂ ಅವರವರ ಜವಾಬ್ದಾರಿ ಅರಿತುಕೊಂಡು ನಡೆಯಬೇಕು. ಹಾಗಾದರೆ ಮಾತ್ರ ಪ್ರಜಾಪ್ರಭುತ್ವ ಯಶಸ್ವಿಯಾಗುತ್ತದೆ, ಇಲ್ಲವಾದರೆ ಅರಾಜಕತೆ ಮೂಡುತ್ತದೆ ಎಂದರು.
ಸಂಸ್ಥೆಯ ಕಾರ್ಯದರ್ಶಿಗಳಾದ ಮುರಳೀಧರ ಪ್ರಭು, ಟ್ರಸ್ಟಿಗಳಾದ ಡಾ. ವೆಂಕಟೇಶ ಶಾನಭಾಗ, ಆರ್.ಎಚ್.ದೇಶಭಂಡಾರಿ, ಪ್ರಾಚಾರ್ಯ ಮಹೇಶ ಉಪ್ಪಿನ, ಗುರುರಾಜ ಶೆಟ್ಟಿ, ಅಂಗ ಸಂಸ್ಥೆಗಳ ಮುಖ್ಯಸ್ಥರು, ಬೋಧಕ-ಬೋಧಕೇತರ ಸಿಬ್ಬಂದಿ, ಪಾಲಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಶಿಕ್ಷಕ ಪ್ರಕಾಶ ಗಾವಡಿ ಸ್ವಾಗತಿಸಿ ವಂದಿಸಿದರು.