ಕುಮಟಾ: 1928 ರ ಫೆಬ್ರವರಿ 28 ರಂದು ಮಹಾನ್ ವಿಜ್ಞಾನಿ ಸರ್.ಸಿ.ವಿ.ರಾಮನ್ ಅವರು ವಿಶ್ವ ಪ್ರಸಿದ್ಧವಾದ “ರಾಮನ್ ಎಫೆಕ್ಟ”ನ್ನು ಜಗತ್ತಿಗೆ ಬಹಿರಂಗ ಪಡಿಸಿದರು. ಈ ದಿನವನ್ನು ರಾಷ್ಟ್ರೀಯ ವಿಜ್ಞಾನ ದಿನವನ್ನಾಗಿ ಆಚರಿಸಲಾಗುತ್ತಿದೆ. ಈ ದಿನದ ವಿಶೇಷವಾಗಿ ಕೊಂಕಣ ಎಜ್ಯುಕೇಶನ್ ಟ್ರಸ್ಟನ ಸರಸ್ವತಿ ವಿದ್ಯಾಕೇಂದ್ರದಲ್ಲಿ ಪುಟಾಣಿಗಳೇ ವಿಜ್ಞಾನಿಗಳ ವೇಷ ಧರಿಸಿ ಆಯಾ ವಿಜ್ಞಾನಿಗಳ ಸಂಶೋಧನೆ ಆವಿಷ್ಕಾರಗಳ ಕುರಿತಾಗಿ ಬೆಳಕು ಚೆಲ್ಲುವ ಮೂಲಕ ಅರ್ಥಪೂರ್ಣವಾಗಿ ವಿಜ್ಞಾನ ದಿನವನ್ನು ಆಚರಿಸಿದರು.
ಆಕಾಶ ನಾಯಕ ಸರ್.ಸಿ.ವಿ.ರಾಮನ್ ಪಾತ್ರದಲ್ಲಿ ಬಂದು ರಾಮನ್ ಎಫೆಕ್ಟ ಬಗ್ಗೆ ವಿವರಿಸಿ ಎಲ್ಲರನ್ನು ಮೆಚ್ಚಿಸಿದರೆ, ಚಂದನ ಹೆಗಡೆ ಜಗದೀಶ ಚಂದ್ರ ಬೋಸ್ ಆಗಿ, ವಿರಾಜ್ ಎಂ.ವಿಶ್ವೇಶ್ವರಯ್ಯರ ವೇಶ ತೊಟ್ಟು, ಸುದರ್ಶನ ಹೆಗಡೆ ವಿಕ್ರಂ ಸಾರಾಭಾಯಿಯ ರೂಪದಲ್ಲಿ ಹಾಗೂ ಮಯೂರ್ ನಾಯ್ಕ ಸಲೀಂ ಅಲಿಯಾಗಿ ಮಿಂಚಿ ವೈಜ್ಞಾನಿಕ ಲೋಕದ ಅಚ್ಚರಿಗಳನ್ನು ಸಭೆಗೆ ಪರಿಚಯಿಸಿದರು.
ವಿಜ್ಞಾನ ಶಿಕ್ಷಕರುಗಳಾದ ಶ್ರೀಮತಿ ಉಷಾ ಭಟ್ಟ, ಮಹೇಶ್ವರಿ ನಾಯಕ, ಕಾವ್ಯಶ್ರೀ ಪಟಗಾರ ಹಾಗೂ ಇನ್ನಿತರ ಶಿಕ್ಷಕರು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಿದರು. ಸಂಸ್ಥೆಯ ಮುಖ್ಯ ಶಿಕ್ಷಕಿ ಸುಜಾತಾ ನಾಯ್ಕ, ಶೈಕ್ಷಣಿಕ ಸಲಹೆಗಾರರಾದ ಆರ್.ಎಚ್.ದೇಶಭಂಡಾರಿ ಹಾಗೂ ಶಿಕ್ಷಕ ವೃಂದದವರು ಕಾರ್ಯಕ್ರಮದಲ್ಲಿ ಹಾಜರಿದ್ದರು.